July 14, 2021 : ಸಂತ ಅಂತೋನಿ ಶಿಕ್ಷಣ ಸಂಸ್ಥೆಗಳು, ನಾರಾವಿಯಲ್ಲಿ ಪ್ರಾಂಶುಪಾಲರಾಗಿ ಹತ್ತು ವರ್ಷಗಳ ಅಮೋಘ ಹಾಗೂ ನಿಸ್ವಾರ್ಥ ಸೇವೆ ಸಲ್ಲಿಸಿ, ಗುಣಮಟ್ಟದ ಹಾಗೂ ಮೌಲ್ಯಭರಿತ ಶಿಕ್ಷಣಕ್ಕೆ ಪ್ರಾಧಾನ್ಯತೆ ನೀಡಿ ಎಲ್ಲಾ ವಿದ್ಯಾರ್ಥಿಗಳ ಪ್ರತ್ಯೇಕವಾಗಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಕನಸುಗಳನ್ನು ಸಾಕಾರಗೊಳಿಸಿ, ಶಿಕ್ಷಣ ಸಂಸ್ಥೆಯನ್ನು ಸಾಧನೆಯ ಉತ್ತುಂಗಕ್ಕೆ ಏರಿಸಲು ಹಗಲಿರುಳು ಶ್ರಮಿಸಿ, ಕಡಬ ಧರ್ಮಕೇಂದ್ರಕ್ಕೆ ಧರ್ಮಗುರುಗಳಾಗಿ ವರ್ಗಾವಣೆಗೊಂಡ ವಂದನೀಯ ಫಾದರ್ ಅರುಣ್ ವಿಲ್ಸನ್ ಲೋಬೊ ಇವರಿಗೆ ಚರ್ಚ್ ವತಿಯಿಂದ ಬೀಳ್ಕೊಡುವ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಸಮಾರಂಭದ ಅಧ್ಯಕ್ಷತೆಯನ್ನು ಧರ್ಮಗುರುಗಳಾದ ವಂದನೀಯ ಫಾದರ್ ಸೈಮನ್ ಡಿ’ಸೋಜರವರು ವಹಿಸಿದ್ದರು. ಈ ಸಂದರ್ಭದಲ್ಲಿ ಪ್ರಾಂಶುಪಾಲರನ್ನು ಚರ್ಚ್ ವತಿಯಿಂದ ಸನ್ಮಾನಿಸಲಾಯಿತು. ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ವಿನ್ಸೆಂಟ್ ರೊಡ್ರಿಗಸ್, ಕಾರ್ಯದರ್ಶಿ ಶ್ರೀಮತಿ ರೀಟಾ ಪಿಂಟೊ, ಜೆರೋಸಾ ಕಾನ್ವೆಂಟ್‍ನ ಸುಪೀರಿಯರ್ ಸಿಸ್ಟರ್ ಮಾರಿ ಸೆಲಿನ್ ಮಿಸ್ಕಿತ್ ಹಾಗೂ ಚರ್ಚ್ ಬಾಂಧವರು ಉಪಸ್ಥಿತರಿದ್ದರು.