July 30, 2021 : ಮನುಷ್ಯನ ದುರಾಸೆಯಿಂದ ಇಡೀ ಜಗತ್ತೇ ಮಲಿನಗೊಂಡಿದೆ. ಇದಕ್ಕೆಲ್ಲಾ ಮೂಲ ಕಾರಣ, ಲೋಕವೆಲ್ಲಾ ತನ್ನದೇ ಎನ್ನುವ ಮನುಷ್ಯನ ಭ್ರಮೆ. ಮನುಜ ಸಮೂಹ ಪ್ರಕೃತಿಯ ಮೇಲೆ ನಿರಂತರ ದಾಳಿ ಮಾಡುತ್ತಿದೆ. ಆದರೆ ಪ್ರಕೃತಿಗೆ ದ್ರೋಹ ಬಗೆದರೆ ಅದೆಂದಿಗೂ ಕ್ಷಮಿಸದು ಎಂದು ನಾರಾವಿ ಸಂತ ಅಂತೋನಿ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ವಂದನೀಯ ಫಾದರ್ ಸೈಮನ್ ಡಿ’ಸೋಜ ಹೇಳಿದರು. ಅವರು ಸಂತ ಅಂತೋನಿ ಪದವಿ ಕಾಲೇಜು ನಾರಾವಿ ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆ ಹಮ್ಮಿಕೊಂಡಿದ್ದ ವನಮಹೋತ್ಸವ ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಅತುಲ್ ಸೇಮಿತ, ಮಾತನಾಡಿ ಮರಗಿಡಗಳು ಉಳಿದರೆ ಮಾತ್ರ ಮನುಷ್ಯ ಸಂಕುಲ ಉಳಿದೀತು. ವಿದ್ಯಾರ್ಥಿಗಳಲ್ಲಿ ಅರಣ್ಯ ಸಂರಕ್ಷಣೆಯ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಇನ್ನಷ್ಟು ಆಗಬೇಕು ಎಂದರು. ಕಾಲೇಜಿನ ಪ್ರಾಂಶುಪಾಲರಾದ ವಂದನೀಯ ಫಾದರ್ ಆಲ್ವಿನ್ ಸೆರಾವೊ ಮಾತನಾಡಿ ಪ್ರಾಣಿಪಕ್ಷಿಗಳು ವಾಸವಿದ್ದ ಜಾಗವನ್ನು ಅತಿಕ್ರಮಿಸಿದ್ದೇ ಮನುಜ ಮಾಡಿದ ತಪ್ಪು. ಅದರ ಫಲವನ್ನು ಎಲ್ಲರೂ ಅನುಭವಿಸುವಂತಾಗಿದೆ. ಒಬ್ಬ ವ್ಯಕ್ತಿ ವರುಷಕ್ಕೊಂದು ಗಿಡ ನೆಟ್ಟರೂ ಸಾಕು ಶುದ್ಧ ಆಮ್ಲಜನಕ ಸೇವಿಸಬಹುದು ಎಂದರು.

ವೇದಿಕೆಯಲ್ಲಿ ಉಪಪ್ರಾಂಶುಪಾಲರಾದ ಶ್ರೀ ಸಂತೋಷ್ ಸಲ್ಡಾನ್ಹ ಹಾಗೂ ಎನ್. ಎಸ್. ಎಸ್. ಘಟಕದ ಕಾರ್ಯದರ್ಶಿಗಳಾದ ಡೆನಿಲ್ ಹಾಗೂ ಲೀಮಾ ಉಪಸ್ಥತರಿದ್ದರು. ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿಗಳಾದ ಶ್ರೀ ದಿನೇಶ್ ಬಿ. ಕೆ. ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು. ಎನ್. ಎಸ್. ಎಸ್. ಘಟಕ ಕಾರ್ಯದರ್ಶಿ ಕು. ಲೀಮಾ ಧನ್ಯವಾದವಿತ್ತು ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ನಂತರ ವಿವಿಧ ರೀತಿ ಗಿಡಗಳನ್ನು ನೆಡಲಾಯಿತು.