Oct 16, 2019 : ಅಂತರ ತರಗತಿ ಪ್ರತಿಭಾ ಸ್ಪರ್ಧೆ ‘ಸಂಗಮ್ 2K19’ ಎಂಬ ಸಾಂಸ್ಕøತಿಕ ಸ್ಪರ್ಧೆಯು ಸಂತ ಅಂತೋನಿ ಕಾಲೇಜು, ನಾರಾವಿಯಲ್ಲಿ ನಡೆಯಿತು. ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ಸಂತೋಷ್ ಗೋವಿಯಸ್, ವಿಭಾಗ ಮುಖ್ಯಸ್ಥರು, ರಸಾಯನ ಶಾಸ್ತ್ರ ವಿಭಾಗ, ಸಂತ ಅಲೋಶಿಯಸ್ ಕಾಲೇಜು, ಮಂಗಳೂರು ಮಾತನಾಡಿ, ವಿದ್ಯಾರ್ಥಿಗಳು ಕಲಿಕೆಯ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಪ್ರಾಮುಖ್ಯತೆ ನೀಡಿದರೆ ತಮ್ಮಲ್ಲಿರುವ ಕೌಶಲ್ಯಗಳನ್ನು ವೃದ್ಧಿಸಲು ಸಾಧ್ಯ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಅಶ್ವಥ್ ಹೆಗ್ಡೆ, ಬಳಂಜ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಎನ್ವಿಗ್ರೀನ್ ಸಂಸ್ಥೆ, ಮಾತನಾಡಿ ತಮ್ಮ ವಿದ್ಯಾರ್ಥಿ ಜೀವನದ ಅನುಭವಗಳನ್ನು ಮತ್ತು ತಮ್ಮ ಕನಸಿನ ಕೂಸಾದ ಜೈವಿಕ ಕೈ ಚೀಲದ ಬಗ್ಗೆ ಮತ್ತು ತಾವು ಬೆಳೆದು ಬಂದ ಬಗೆಯನ್ನು ವಿವರಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಸಭಾಧ್ಯಕ್ಷತೆಯನ್ನು ವಹಿಸಿದ ಸಂತ ಅಂತೋನಿ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ವಂದನೀಯ ಸೈಮನ್ ಡಿ’ಸೋಜರವರು ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವೇದಿಕೆಯಲ್ಲಿ ICYM, ನಾರಾವಿ ಘಟಕದ ಅಧ್ಯಕ್ಷರಾದ ಶ್ರೀ ಜೋಯಲ್ ರೊಡ್ರಿಗಸ್, ಉಪ ಪ್ರಾಂಶುಪಾಲರಾದ ಶ್ರೀ ಸಂತೋಷ್ ಸಲ್ಡಾನ್ಹ ಉಪಸ್ಥಿತರಿದ್ದರು. ಶ್ರೀ ಅಶ್ವಥ್ ಹೆಗ್ಡೆಯವರನ್ನು ಈ ಸಂದರ್ಭದಲ್ಲಿ ಕಾಲೇಜು ವತಿಯಿಂದ ಸನ್ಮಾನಿಸಲಾಯಿತು.

ಪ್ರಾಂಶುಪಾಲರಾದ ವಂದನೀಯ ಅರುಣ್ ವಿಲ್ಸನ್ ಲೋಬೊ ರವರು ಸ್ವಾಗತಿಸಿ, ಉಪನ್ಯಾಸಕಿ ಶ್ರೀಮತಿ ಸೌಮ್ಯ ಜೈನ್ ವಂದಿಸಿದರು. ಉಪನ್ಯಾಸಕರಾದ ಶ್ರೀ ದಿನೇಶ್ ಬಿ. ಕೆ ಕಾರ್ಯಕ್ರಮ ನಿರೂಪಿಸಿದರು.